Wednesday, July 15, 2015

ಅಬ್ಬಬ್ಬಾ.. ಎಷ್ಟು ವರ್ಷಗಳಾಯಿತು!!!

ಅಣ್ಣಾವ್ರು ಶಂಕರ್ ಗುರು ಚಿತ್ರದಲ್ಲಿ ಸುಮ್ಮನೆ ಕೂತಿರುತ್ತಾರೆ.. ಅಚಾನಕ್ ಒಂದು ದೂರವಾಣಿ ಕರೆ ಬರುತ್ತೆ..

"ಶಂಕ್ರು ಶಂಕ್ರು ನಾನು.. ನಿನ್ನ ಅಮ್ಮ ಕಣೋ"
ಇತ್ತ ಕಡೆಯಿಂದ ಅಣ್ಣಾವ್ರಿಗೆ ಗೊತ್ತಾಗುತ್ತದೆ ಶಂಕರನ ತಾಯಿ ಮಾತಾಡ್ತಾ ಇರೋದು.. ಅಂತ
"ಸುಮತಿ ನಾನು ನಿನ್ನ ರಾಜಶೇಖರ್ ಮಾತಾಡ್ತಾ ಇರೋದು"

ಅಬ್ಬಬ್ಬಾ.. ಎಷ್ಟು ವರ್ಷಗಳಾಯಿತು.. ಎಂದು ಹೇಳುವಾಗ ಅಬ್ಬಬ್ಬ ಎನ್ನುವ ಮಾತು ಕೇಳುವುದೇ ಒಂದು ಚಂದ..

ಹಾಗೆಯೇ ೧೯೯೩ ಏಪ್ರಿಲ್ ಮಾಸದಲ್ಲಿ ಪದವಿ ಶಿಕ್ಷಣ ಮುಗಿಸಿ.. ಜೀವನದ ಹಾದಿಗೆ ಎಲ್ಲರೂ ತಮ್ಮ ತಮ್ಮ ನಡೆಯನ್ನು ಅನುಸರಿಸುತ್ತಾ ಸಾಗಿದಾಗಿನ ಮಾತು

.. ಆ ನಮ್ಮ ಕಾಲದಲ್ಲಿ ಇಂದಿನ ದಿನಗಳ ಹಾಗೆ ಸಾಮಾಜಿಕ ತಾಣ ಎನ್ನುವ ಪದ ಅಂದರೆ .. ಬಸ್ ನಿಲ್ದಾಣ, ಹಳೆಯ ಹೋಟೆಲ್, ಆಟದ ಮೈದಾನ, ಕಾಲೇಜಿನ ಕ್ಯಾಂಟೀನ್ ಇದೆ ಆಗಿತ್ತು.. ಫೇಸ್ಬುಕ್, ಈ ಮೇಲ್, ವ್ಹಾಟ್ಸಾಪ್... ಇವೆಲ್ಲ ಪದಕೊಶದಲ್ಲಿಯೇ ಜಾಗವನ್ನು ಕಂಡಿರದ ಕಾಲವಾಗಿತ್ತು..

ಎಲ್ಲರನ್ನು ಒಂದು ನೆರಳಲ್ಲಿ ನಿಲ್ಲಸಬೇಕು ಎನ್ನುವ ಒಂದು ಸಣ್ಣ ಕಿಡಿ ನಮ್ಮ ತರಗತಿಯ ಆ ಕಾಲದ ಬಾಂಡ್ ಎಂದೇ ಹೆಸರಾಗಿದ್ದ ಹರಿನಾಥ್ ಶುರು ಮಾಡಿದ.. ಅವನಿಗೆ ಸಾತ್ ನೀಡಿದ್ದು ಚೆಲುವಾಂತ ಚೆನ್ನಿಗ ಅನಿಲ್.. ಹೀಗೆ ಕಳೆದ ಬುಧವಾರ ೭ ನೆ ತಾರೀಕು ಜುಲೈ ೨೦೧೫ ಶುರುವಾದ ಒಂದು ವಾಟ್ಸಾಪ್ ಗುಂಪಿಗೆ ಬಿದ್ದ ಸ್ನೇಹದ ಬಿಂಧುಗಳು ಇಂದಿಗೆ ೨೯.

ಹೀಗೆ ಶುರುವಾದ ನಮ್ಮ ಗುಂಪು.. ಇಂದು ಅಂದರೆ ಬುಧವಾರ ೧೫ ಜುಲೈ ೨೦೧೫ ಬೆಳಿಗ್ಗೆ ಒಬ್ಬರ ಕಾಲು ಒಬ್ಬರು ಎಳೆಯುತ್ತಾ ಕಾಫೀಗೆ ಸಿಗೋಣ ಅದು ಇದು ಎನ್ನುತ್ತಾ ಸಂಜೆ ಗಾಂಧಿ ಬಜಾರಿನ ನ್ಯೂ ಕೃಷ್ಣ ಭವನ್ ದಲ್ಲಿ ಭೇಟಿ ಆಗಿಯೇ ಬಿಟ್ಟೆವು..

ಕಾಲನ ದಾಳಿ.. ಸಂಸಾರದ ಜವಾಬ್ಧಾರಿ.. ಕಛೇರಿ ಕೆಲಸದ ಒತ್ತಡ, ಸಾಧಿಸಬೇಕು ಎನ್ನುವ ಛಲ... ದೇಹವನ್ನು, ಕೇಶವಿನ್ಯಾಸವನ್ನು, ಆಕಾರವನ್ನು ಅನೇಕ ಬಗೆಯಲ್ಲಿ ಬದಲಾಯಿಸಿತ್ತು.. ಆದರೆ ಇವರು ನಮ್ಮ ಗೆಳೆಯರು, ಇವರೊಡನೆ ಒಂದಷ್ಟು ಕಾಲ ಜೊತೆಯಾಗಿ ಓದಿದ್ದೆವು, ನಲಿದಾಡಿದ್ದೆವು .. ಇವನು ನಮ್ಮ ಆಪ್ತ ಮಿತ್ರ ಎನ್ನುವ ಆ ಮನಸ್ಥಿತಿ ಇಂದಿಗೂ ನಮ್ಮೆಲ್ಲರಲ್ಲಿ ಇದ್ದದ್ದು ವಿಶೇಷ..

ಹಳೆಯ ದಿನಗಳ ತಾಜಾ ನೆನಪನ್ನು ಮತ್ತೊಮ್ಮೆ ಕಾಲಗರ್ಭದಿಂದ ಹೊರತೆಗೆದು ಅದನ್ನು ಹೆಕ್ಕಿ, ಆರಿಸಿ, ನೆನಪಿಸಿಕೊಂಡ ಬಗೆ ಅಮೋಘ..,

ನಮ್ಮ ನಗು, ಕೇಕೆ, ಹಳೆಯ ಗೆಳೆಯರನ್ನು ಹೊಸರೂಪದಲ್ಲಿ ಕಂಡ ಆನಂದ ಎಷ್ಟು ಪರಿಮಿತಿ ಮೀರಿತ್ತು ಎಂದರೆ.. ಆ ಹೋಟೆಲಿಗೆ ಬಂದಿದ್ದ ಮಿಕ್ಕ ಅತಿಥಿಗಳು ನಮ್ಮನ್ನೆಲ್ಲ ಅನಾಗರೀಕರು ಎನ್ನುವ ಹಾಗೆ ನೋಡುತ್ತಾ.. ಮುಖದಲ್ಲಿ ಏನನ್ನೋ ಕಳೆದುಕೊಂಡ ರೀತಿಯನ್ನು ವ್ಯಕ್ತ ಪಡಿಸುತ್ತಾ ನಮ್ಮ ಬಗ್ಗೆ ಅತೃಪ್ತಿಯಿಂದ ನೋಡುತ್ತಿದ್ದರು.. ಆದರೆ ನ್ಯೂಟನ್ ಸಿದ್ದಾಂತವನ್ನು ಪ್ರತಿಪಾದಿಸುತ್ತಲೇ ಮಂಗನಿಂದ ಮಾನವ ಅಲ್ಲ ಕೆಲವೊಮ್ಮೆ ಮತ್ತೆ ಮಾನವ ತನಗೆ ಬೇಕಾದಾಗ ಮಂಗ ಆಗಬಲ್ಲ ಎಂದು ನಿರೂಪಿಸಿದ ಕ್ಷಣ ಅದು..

ಘಂಟೆ ಒಂಭತ್ತು ಮೂವತ್ತು ಆಗಿತ್ತು.. ಯಾರಿಗೂ ಮನೆಗೆ ಹೋಗಬೇಕು ಎನ್ನುವ ತವಕ (ಕೆಲವರನ್ನು) ಬಿಟ್ಟು ಮಿಕ್ಕವರಿಗೆ ಬಂದಿರಲೇ ಇಲ್ಲ...

ನಾನು ಪದವಿ ಶಿಕ್ಷಣಕ್ಕೆ ಸೇರ್ಪಡೆಯಾದ ಒಂದು ರೀತಿಯಲ್ಲಿ ದುಃಖಿತನಾಗಿದ್ದೆ.. ಪದವಿ ಪೂರ್ವ ತರಗತಿಗಳಲ್ಲಿ ಇದ್ದ ನನ್ನ ಆತ್ಮೀಯ ಸ್ನೇಹಿತರೆಲ್ಲ  ಉನ್ನತ ವಿದ್ಯಾಭ್ಯಾಸ ಎಂದು ತಾಂತ್ರಿಕ, ವೈದ್ಯಕೀಯ, ವ್ಯಾಪಾರ ಎಂದು ಬೇರೆ ಹಾದಿ ಹಿಡಿದಿದ್ದರು.. ಬೇಸರದಿಂದ, ಜೊತೆಯಲ್ಲಿ ಸರಿಯಾಗಿ ಓದಿ ನಾನು ಕೂಡ ಒಳ್ಳೆ ಅಂಕಗಳನ್ನು ಗಳಿಸಿದ್ದಾರೆ ನಾನು ಅವರ ಹಾಗೆ ಓದಬಹುದಿತ್ತಲ್ಲ ಎನ್ನುವ ಕೀಳರಿಮೆ, ಒಂದು ರೀತಿಯ ಬಡತನ, ರೂಪ ಇಲ್ಲ ಎನ್ನುವ ಕೀಳರಿಮೆ ಎಲ್ಲವೂ ಸೇರಿಕೊಂಡು.. ಪ್ರೇಮಲೋಕದ "ನೆಲ ನೋಡ್ಕೋತ ಬರಬೇಕು ನೆಲ ನೋಡ್ಕೋತಾ ಹೋಗ್ಬೇಕು.. ಆ ಅಂಡರ್ಸ್ಟ್ಯಾಂಡ್" ಎನ್ನುವ ಹಾಡಿನಂತೆ ಮೂರು ವರ್ಷವನ್ನು ಸಾಗಿ ಹಾಕಿದ್ದೆ.. ಪದವಿ ಶಿಕ್ಷಣದಲ್ಲಿ ಸ್ನೇಹಿತರ ಪಟ್ಟಿಯಲ್ಲಿ ಉಳಿದವನು ಹರಿನಾಥ್ ಮಾತ್ರ.. ನಂತರ ಫೇಸ್ ಬುಕ್ ಎನ್ನುವ ಮಾಯಾಜಾಲದಲ್ಲಿ ಒಂದಿಬ್ಬರು ಸ್ನೇಹಿತರಾಗಿದ್ದರು ಅಷ್ಟೇ..


ಆದರೆ ಇಂದು ಭೇಟಿಯಾದಾಗ ಎಲ್ಲರೂ ಅವರವರ ಕ್ಷೇತ್ರದಲ್ಲಿ ಸಾಧನೆ ಮಾಡಿದವರೇ ಆಗಿದ್ರೂ ಕೂಡ ಎಲ್ಲರ ಕಾಲುಗಳು ನೆಲದಲ್ಲಿಯೇ ಇದ್ದವು.. ಇದು ನನಗೆ ಹುರಪನ್ನು ನೀಡಿತು.. ಮೂರು ವರ್ಷ ಮಾತಾಡದೆ ಇದ್ದವನು ಇಂದು ಅಣೆಕಟ್ಟಿನಿಂದ ನೀರನ್ನು ಹರಿಯ ಬಿಟ್ಟಂತೆ ಸರಾಗವಾಗಿ ಹರಿದಿತ್ತು..

ತುಂಬಾ ಖುಷಿಕೊಟ್ಟ ಆ ಮೂರು ತಾಸುಗಳು ಆ ಮೂರು ವರ್ಷದ ನೋವನ್ನು ನುಂಗಿ ಹಾಕಿದವು.. ಇಂಥಹ ಸುಂದರ ಕ್ಷಣಗಳನ್ನು ಕೊಟ್ಟ ನನ್ನ ಗೆಳೆಯರೆಲ್ಲರಿಗೂ ನನ್ನ ಅನಂತ ಧನ್ಯವಾದಗಳು..

ಆ ಸುಂದರ ಕ್ಷಣಗಳು ನಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾದದ್ದು ಹೀಗೆ...




ಮತ್ತೊಮ್ಮೆ ಸೇರೋಣ.. ಕಾಲೇಜಿನ ದಿನಗಳನ್ನು ಮೆಲುಕು ಹಾಕೋಣ.. ಅಲ್ಲವೇ.. ಮತ್ತೆ ಸಿಗುತ್ತೀರ ತಾನೇ.. !